ಬೆಳಗಾವಿ: ಕಳೆದ ಭಾನುವಾರ ಅಥಣಿ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ತಾಯಿ-ಮಗನನ್ನು ಕತ್ತು ಹಿಸುಕಿ ಕೊಲೆಗೈದು ಪರಾರಿಯಾಗಿದ್ದ ಆರೋಪಿಗಳಲ್ಲಿ ಓರ್ವ ಪೊಲೀಸರನ್ನು ಕಂಡು ಹೆದರಿ ಓಡಿಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದು ಇನ್ನೋರ್ವ ಆತ್ಮಹತ್ಯೆಯಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಏ. ೧೩ರಂದು ಕೊಡಗಾನೂರು ಗ್ರಾಮದಲ್ಲಿನ ತೋಟದ ವಸತಿ ಪ್ರದೇಶದಲ್ಲಿ ಚಂದ್ರವ್ವ ಅಪ್ಪಾರಾಯ ಇಚೇರಿ (೬೨) ಹಾಗೂ ವಿಠ್ಠಲ್ ಅಪ್ಪರಾಯ ಇಚೇರಿ (೪೨) ಎಂಬುವರನ್ನು ಕೊಲೆಗೈದ
ದುಷ್ಕರ್ಮಿಗಳು ಶವಗಳನ್ನು ಕಬ್ಬಿನ ಗದ್ದೆಯಲ್ಲಿ ಎಸೆದು ಪರಾರಿಯಾಗಿದ್ದರು.
ಸುರೇಶ್ ರಾಮಪ್ಪ ಸವದತ್ತಿ (೩೬) ಹಾಗೂ ಶ್ರೀಶೈಲ ಸಂಗಣ್ಣ ಹೊರಟ್ಟಿ (೪೦) ಈ ಪ್ರಕರಣದ ಆರೋಪಿಗಳಾಗಿದ್ದರು. ಈ ಕುರಿತು ಎಸ್ಪಿ ಭೀಮಾಶಂಕರ ಗುಳೇದ ಮಾತನಾಡಿ, ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರ ಕೊಲೆ ಪ್ರಕರಣ ದಾಖಲಾಗಿತ್ತು. ಪೊಲೀಸರು ವೈಜ್ಞಾನಿಕವಾಗಿ ತನಿಖೆ ನಡೆಸಿ ಆರೋಪಿಗಳ ಪತ್ತೆ ಹಚ್ಚಿದ್ದರು.
ಇದರಲ್ಲಿ ಓರ್ವ ಆರೋಪಿ ಶೇಗುಣಸಿ ಗ್ರಾಮದವನೆಂದು ಖಚಿತವಾಗುತ್ತಿದ್ದಂತೆ ಅಥಣಿ ತಾಲೂಕಿನ ಶೇಗುಣಸಿ ಗ್ರಾಮಕ್ಕೆ ಹೋಗಿ ಸ್ಥಳೀಯರನ್ನು ವಿಚಾರಿಸಿದಾಗ ಇನ್ನೋರ್ವ ಆರೋಪಿಯೂ ಅದೇ ಗ್ರಾಮದವನು ಎಂದು ತಿಳಿದು ಬಂದಿದೆ. ಪ್ರಮುಖ ಆರೋಪಿ ಸುರೇಶ್ ಸವದತ್ತಿ ಮನೆಯಲ್ಲಿರಲಿಲ್ಲ. ಆದರೆ ಸುರೇಶನ ಸ್ನೇಹಿತ(ಸಂಗಡಿಗ) ಪೊಲೀಸರು ಮನೆಗೆ ಬಂದಿರುವುದನ್ನು ತಿಳಿದು ತಕ್ಷಣವೇ ಅಲ್ಲಿಂದ ಓಡಿ ಹೋಗಿ, ಕಬ್ಬಿನ ಗದ್ದೆಯಲ್ಲಿ ಅವಿತು ಕುಳಿತಿದ್ದ. ಆಗ ಕಬ್ಬಿನ ಗದ್ದೆಯ ಸುತ್ತಲೂ ನಮ್ಮ ಸಿಬ್ಬಂದಿ ಸುತ್ತುವರಿದಿದ್ದರು ಎಂದು ತಿಳಿಸಿದರು.
ಕಬ್ಬಿನ ಗದ್ದೆಯಿಂದ ಮತ್ತೆ ಪರಾರಿಯಾಗಿ ಪಕ್ಕದಲ್ಲಿರುವ ಮನೆಯವರಲ್ಲಿ ತನ್ನ ಮೊಬೈಲ್ ಕೊಟ್ಟು ಆ ತೋಟದ ಒಂದು ಮರದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದ. ಅಷ್ಟರಲ್ಲಿ ಪೊಲೀಸರು ಅವನನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಆರೋಗ್ಯ ಚೇತರಿಕೆ ಕಾಣುತ್ತಿದೆ ಎಂದು ಹೇಳಿದರು.
ಇದರ ಜೊತೆಗೆ ಪ್ರಮುಖ ಆರೋಪಿ ಸುರೇಶ್ ಸವದತ್ತಿಯನ್ನೂ ಕೂಡ ಸಿಬ್ಬಂದಿ ಹುಡುಕಾಟ ನಡೆಸಿದಾಗ ಆತ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿದರು. ಈತ ಮೃತ ಚಂದ್ರವ್ವಳ ತಂಗಿಯ ಮಗಳ ಗಂಡ. ಇವರ ನಡುವೆ ಯಾವ ರೀತಿಯ ವ್ಯವಹಾರ ಇತ್ತು, ಕೊಲೆಗೆ ಪ್ರಮುಖ ಕಾರಣ ಏನು? ಎಂಬುದು ತನಿಖೆಯಿಂದ ಗೊತ್ತಾಗಲಿದೆ.