Home ತಾಜಾ ಸುದ್ದಿ ಹಸುವಿನ ಕೆಚ್ಚಲು ಕೊಯ್ದ ದುರುಳರು

ಹಸುವಿನ ಕೆಚ್ಚಲು ಕೊಯ್ದ ದುರುಳರು

0

ಬಾಗಲಕೋಟೆ(ಕುಳಗೇರಿ ಕ್ರಾಸ್): ಮನೆಯ ಮುಂದೆ ತಗಡಿನ ಚಾಟಿನಲ್ಲಿ ಮಲಗಿದ್ದ ಹಸುವಿನ ಕೆಚ್ಚಲಿನ ಒಂದು ಮೊಲೆಯನ್ನು ಕೊಯ್ದ ಘಟನೆ ಗ್ರಾಮದ ಮೇಟಿಯವರ ಬಡಾವಣೆಯಲ್ಲಿ ನಡೆದಿದೆ.
ತಡರಾತ್ರಿ ಈ ಅಮಾನವೀಯ ಘಟನೆ ನಡೆದಿದ್ದು ಬೆಳಗಿನ ಜಾವ ಹಸುವಿನ ಮಾಲಿಕ ಕೊಟ್ಟಿಗೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಗಮನಕ್ಕೆ ಬಂದಿದೆ ಎನ್ನುತ್ತಿದ್ದಾರೆ. ಗರ್ಭಾವಸ್ಥೆಯಲ್ಲಿರುವ ಹಸುವಿನ ಕೆಚ್ಚಲಿನ ಒಂದು ಮೊಲೆ ಕೊಯ್ದು ಪಾಪಿಗಳು ವಿಕೃತಿ ಮೆರೆದಿದ್ದಾರೆ. ಸದ್ಯ ಹಸು ರಕ್ತ ಸ್ರಾವದಿಂದ ನರಳಾಡಿದ್ದು ಸ್ಥಳೀಯ ಪಶು ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಲಾಗಿದೆ.
ನೋವು ತೋಡಿಕೊಂಡ ಹಸುವಿನ ಮಾಲಿಕರು: ಈ ಆಕಳು ಒಬ್ಬಿಬ್ಬರಿಗೆ ಅಸಗೋಳಲ್ಲ ನಾಲ್ಕೈದು ಜನ ಮೂಗುದಾರ ಹಿಡಿದು ಈ ಕೃತ್ಯ ನಡೆಸಿರಬಹುದು ಎಂದು ಹಸುವಿನ ಮಾಲಿಕ ಬರಮಪ್ಪ ಪತ್ರಿಕೆಗೆ ತಿಳಿಸಿದ್ದಾರೆ.
ಸದ್ಯ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದು ಘಟನಾ ಸ್ಥಳಕ್ಕೆ ಬಂದು ಮಾಹಿತಿ ಪಡೆದುಕೊಂಡು ಹೋಗಿದ್ದಾರಂತೆ. 10 ಗಂಟೆಗೆ ಪಿಎಸ್‌ಐ ಬರ‍್ತಾರೆ ಎಂದು ಹೇಳಿ ಹೋದರು. ಸಂಜೆಯಾದ್ರೂ ಯಾರೂ ಬಂದಿಲ್ಲ. ಇವತ್ತ ಹಿಂಗ ಮಾಡ್ಯಾರ ನಾಳೆ ಮತ್ತೇನರ ಮಾಡ್ತಾರೋ ಗೊತ್ತಿಲ್ಲ ಎಂದು ಹಸುವಿನ ಮಾಲಿಕ ಬರಮಪ್ಪ, ಪತ್ನಿ ಕೆಂಚವ್ವ ಪತ್ರಿಕೆ ಎದುರು ತಮ್ಮ ಅಳಲು ತೋಡಿಕೊಂಡರು.
ಕೃತ್ಯ ನಡೆದ ಸ್ಥಳಕ್ಕೆ ಗ್ರಾಮದ ಜನರು ಭೇಟಿ ನೀಡುತ್ತಿದ್ದು ಪಾಪಿಗಳ ಈ ಕೃತ್ಯಕ್ಕೆ ಹಿಡಿಶಾಪ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾವು ಪೂಜಿಸುವ ಗೋಮಾತೆ ದೇವರ ಸಮಾನ. ಆದರೆ ಹಾಲು ಕೊಡುವ ಗೋವಿನ ಕೆಚ್ಚಲು ಕೊಯ್ದು ಪಾಪದ ಕೆಲಸ ಮಾಡಿದ್ದಾರೆ. ಈ ದುಷ್ಕೃತ್ಯ ಎಸಗಿದ ಪಾಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಅಂಗನವಾಡಿ ನಿವೃತ್ತ ಶಿಕ್ಷಕಿ ವೆಂಕಮ್ಮ ಕಲಬಾಶೆಟ್ಟಿ ಕೃತ್ಯವನ್ನು ಖಂಡಿಸಿದ್ದಾರೆ.
ಪತ್ರಿಕೆ ಜೊತೆ ಮಾತನಾಡಿದ ಕಿರಾಣಿ ವರ್ತಕ ಪ್ರವೀಣ ಹುಳ್ಳಿ ಇದೊಂದು ಅಮಾನವೀಯ ಕೃತ್ಯ. ಪೊಲೀಸರು ಈ ಘಟನೆಯನ್ನು ಅಲ್ಪವೆಂದು ತಿಳಿಯಬಾರದು ತನಿಖೆ ನಡೆಸಬೇಕು. ಘಟನೆ ನಡೆದ ಸ್ಥಳಗಳಲ್ಲಿನ ಸಿಸಿ ಟಿವಿ ದೃಶ್ಯಾವಳಿ ಗಮನಿಸಿ ಈ ಕೃತ್ಯ ಎಸಗಿದವರ ಬಂಧನ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಕಲಬುರಗಿ ಆವೃತ್ತಿ ರಜತ ಸಂಭ್ರಮ

Exit mobile version