ಚಿಕ್ಕಮಗಳೂರು : ಜಿಲ್ಲೆಯ ಕಡೂರು ತಾಲೂಕಿನ ಹಿರೇನಲ್ಲೂರು ಹೋಬಳಿಯ ಕೇದಿಗೆರೆ ಗ್ರಾಮದ ರೈತ ಸಾಲಬಾಧೆ ತಾಳಲಾರದೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತಪಟ್ಟವರನ್ನು ಗ್ರಾಮದ ಮಂಜುನಾಥ(38) ಗುರುತಿಸಲಾಗಿದ್ದು, ಮಂಜುನಾಥ ತನ್ನ ತಂದೆಗೆ ಸೇರಿದ 2 ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದ, ಇತ್ತೀಚೆಗೆ ಸೂರ್ಯಕಾಂತಿ, ನೆಲಗಡಲೆ, ಈರುಳ್ಳಿ ಬೆಳೆಯಲು ವಿವಿಧ ಬ್ಯಾಂಕ್ ಹಾಗೂ ಫೈನಾನ್ಸ್ ಮತ್ತಿತರ ಕಡೆಗಳಲ್ಲಿ ಸುಮಾರು 5 ಲಕ್ಷ ರೂ ಸಾಲ ಮಾಡಿಕೊಂಡಿದ್ದ.
ಬೆಳೆ ಸರಿಯಾಗಿ ಬರದ ಕಾರಣ ಮನನೊಂದು ಅವರ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನ ಪತ್ನಿ ರೇಣುಕಮ್ಮ ನೀಡಿದ ದೂರಿನ ಆಧಾರದಲ್ಲಿ ಯಗಟಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೀರೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಶವಪರೀಕ್ಷೆ ನಡೆಸಿ ವರದಿ ನೀಡಿದ್ದಾರೆ.