ರಬಕವಿ-ಬನಹಟ್ಟಿ: ಶಾಲೆಗೆ ತೆರಳುವದಾಗಿ ತಿಳಿಸಿ ಬೆಟ್ಟದಲ್ಲಿರುವ ವಿಷಕಾರಿ ಬೀಜ ಸೇವಿಸಿದ ಪರಿಣಾಮ ಐವರು ಮಕ್ಕಳು ಅಸ್ವಸ್ಥರಾದ ಘಟನೆ ತೇರದಾಳ ಪಟ್ಟಣ ವ್ಯಾಪ್ತಿಯಲ್ಲಿ ಜರುಗಿದೆ.
ತೇರದಾಳದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿನ ಐವರು ವಿದ್ಯಾರ್ಥಿಗಳಾದ ಆಕಾಶ ಮಾದರ, ಮಹಾಂತೇಶ ಮಾದರ, ಮಲ್ಲು ಮಾದರ, ಮುತ್ತು ಮಾದರ ಹಾಗೂ ಅಪ್ಪಾಜಿ ಮಾದರ ಮಂಗಳವಾರ ಮಧ್ಯಾಹ್ನ ಹೊತ್ತು ತೇರದಾಳ ಸಮೀಪದ ಹಳಿಂಗಳಿ ಗ್ರಾಮದಲ್ಲಿರುವ ಭದ್ರಗಿರಿ ಬೆಟ್ಟದಲ್ಲಿರುವ ಗಿಡಗಳ ಸುತ್ತ ಆಟವಾಡಿದ್ದಾರೆ. ನಂತರ ಅಲ್ಲಿಯೇ ಇದ್ದು ಬಾದಾಮಿ ಎಂದು ತಿಳಿದು ವಿಷಕಾರಿ ಬೀಜವನ್ನು ತಲಾ ಐದಾರು ಸೇವನೆ ಮಾಡಿದ ಕಾರಣ ತೀವ್ರ ಅಸ್ತಸ್ಥಗೊಂಡಿದ್ದಾರೆ.
ಘಟನೆ ತಿಳಿದ ನಂತರ ಹಾಸ್ಟೆಲ್ ವಾರ್ಡನ್ ವಸಂತ ಹಿರೇಮಠ ಸ್ಥಳಕ್ಕಾಗಮಿಸಿ ತೇರದಾಳ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದಾಗ ನಂತರ ರಬಕವಿ-ಬನಹಟ್ಟಿ ಸಮುದಾಯ ಆಸ್ಪತ್ರೆಯಲ್ಲಿಯೂ ಹೆಚ್ಚಿನ ಚಿಕಿತ್ಸೆ ವ್ಯವಸ್ಥೆಯಿಲ್ಲದ ಕಾರಣ ಜಮಖಂಡಿ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ಐವರು ವಿದ್ಯಾರ್ಥಿಗಳನ್ನು ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವಾರ್ಡನ್ ವಸಂತ ಹಿರೇಮಠ ಸ್ಪಷ್ಟಪಡಿಸಿದ್ದಾರೆ.