ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ಪ್ರತಿ ತಾಲೂಕಿನ ಗ್ರಾಮ ಮತ್ತು ನಗರ ಬಡಾವಣೆಗಳಲ್ಲಿ ಮನೆ ಮನೆಗೆ ಪೋಲಿಸ್ ಕಾರ್ಯಕ್ರಮದಡಿ ಪೋಲಿಸರು ಮನೆಗಳಿಗೆ ಭೇಟಿ ನೀಡಿ ಅವರ ಕುಂದು ಕೊರತೆಗಳನ್ನು ವಿಚಾರಿಸಿ ಪೋಲಿಸ್ ಹಾಗೂ ಸಾರ್ವಜನಿಕರ ನಡುವಿನ ಸಮನ್ವಯತೆ ಸಾಧಿಸುವ ನಿಟ್ಟಿನಲ್ಲಿ ಎಸ್.ಪಿ. ದೀಪನ್ ಅವರ ಮಾರ್ಗದರ್ಶನದಲ್ಲಿ ಪೋಲಿಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳು ಭೇಟಿ ನೀಡಿ, ಸಾರ್ವಜನಿಕರ ದೂರುಗಳನ್ನು ಆಲಿಸಿ, ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಕಲ್ಪಿಸಲಾಗುತ್ತಿದೆ.
ಪೋಲಿಸ್ ಹಾಗೂ ಜನರ ನಡುವಿನ ಸಂಬಂಧವನ್ನು ಬೆಸೆಯುವ ಹಿನ್ನಲೆಯಲ್ಲಿ, ಪೋಲಿಸ್ ಬಂದಾರ, ಮನೆ-ಮನೆಗೆ ಬಂದಾರ, ಬನ್ನಿ ಜಾಗ್ರತರಾಗಿ, ಎನ್ನುವ ಜಾಗೃತಿ ಗೀತೆಯೊಂದಿಗೆ ಮನೆ, ಮನೆಗೆ ಪೋಲಿಸರು ಭೇಟಿ ನೀಡಿ ಅರ್ಥಪೂರ್ಣ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ. ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆ ವತಿಯಿಂದ ಮನೆ, ಮನೆಗೆ ಪೋಲಿಸ್ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದು ದೇಶದಲ್ಲೆ ವಿನೂತನವಾದ ಕಾರ್ಯಕ್ರಮವಾಗಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ, ಸಮಾಜದಲ್ಲಿ ನಿರ್ಭಯ ವಾತಾವರಣ ನಿರ್ಮಾಣ ಮಾಡಲು ಪೋಲಿಸ್ ಇಲಾಖೆಯೊಂದಿಗೆ ಸಾರ್ವಜನಿಕರ ಸಮನ್ವಯತೆ ಅತ್ಯಗತ್ಯ. ಈ ಕಾರ್ಯಕ್ರಮದ ಮೂಲಕ ಜನರು ಯಾರಿಂದಲೂ ತೊಂದರೆ, ಮೋಸ ಹೋಗಿದ್ದರೆ, ನೆರೆಹೊರೆಯಲ್ಲಿ ಕಂಡುಬರುವ ಕಾನೂನು ಬಾಹಿರ ಚಟುವಟಿಕೆಗಳ ಕುರಿತು ಯಾವುದೇ ಆತಂಕವಿಲ್ಲದೆ ಮುಕ್ತ ಮನಸ್ಸಿನೊಂದಿಗೆ ಪೋಲಿಸರೊಂದಿಗೆ ಹಂಚಿಕೊಳ್ಳಬಹುದಾಗಿದೆ. ಆದ್ದರಿಂದ ಜಿಲ್ಲೆಯ ಎಲ್ಲಾ ನಾಗರಿಕರು ಈ ಕಾರ್ಯಕ್ರಮಕ್ಕೆ ಕೈಜೋಡಿಸುವಂತೆ ಎಸ್.ಪಿ. ದೀಪನ್ ಮನವಿ ಮಾಡಿದ್ದಾರೆ.