ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಕಲಿ ಕ್ಲಿನಿಕ್ ಮತ್ತು ವೈದ್ಯರ ಸಂಖ್ಯೆ ಹೆಚ್ಚಾಗಿದ್ದು, ಸಾರ್ವಜನಿಕರ ದೂರಿನ ಮೇರೆಗೆ ದಾಳಿಗಳು ಪ್ರಾರಂಭವಾಗಿವೆ. ಇದೇ ವಾರದ ಆರಂಭದಲ್ಲಿ ಮುಂಡಗೋಡ ಮತ್ತು ಕಾರವಾರ ನಗರದಲ್ಲಿ ತಲಾ ಒಂದೊಂದು ನಕಲಿ ಕ್ಲಿನಿಕ್ ಮುಚ್ಚಿಸಿ, ನೋಟೀಸ್ ನೀಡಲಾಗಿದೆ.
ಮುಂಡಗೋಡ ತಾಲೂಕಿನ ಕಾತೂರು ಗ್ರಾಮದಲ್ಲಿ ರತ್ನಮ್ಮ ಎಂಬ ವೈದ್ಯರು ನಡೆಸುತ್ತಿದ್ದ ಕ್ಲಿನಿಕ್ನಲ್ಲಿ ಭಯಾನಕ ಚಿಕಿತ್ಸೆಗಳಿದ್ದವು. ಅವುಗಳನ್ನು ಕಂಡ ಸರ್ಕಾರಿ ವೈದ್ಯರ ತಂಡ ಬೆಚ್ಚಿಬಿದ್ದಿದೆ. ಸಾರ್ವಜನಿಕರ ಕಾಯಿಲೆಗೆ ವಿಚಿತ್ರ ಔಷಧಿ ಮತ್ತು ಚಿಕಿತ್ಸೆ ಕೊಡಲಾಗಿತ್ತಿತ್ತು.
ಹಿಂದೆ ನಕಲಿ ಕ್ಲಿನಿಕ್ ಹೆಸರಲ್ಲಿ ಸಿಕ್ಕಿಬಿದ್ದು, ಮುಂದೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟ ನಂತರವೂ ನಕಲಿ ಕ್ಲಿನಿಕ್ ಮುಂದುವರಿದಿತ್ತು. ಈ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ಒಂದು ದಿನದ ಹಿಂದೆ ದಾಳಿ ಮಾಡಿದಾಗ ನಕಲಿ ಡಾಕ್ಟರ್ ರತ್ನಮ್ಮ ಸಿಕ್ಕಿಬಿದ್ದಿದ್ದಾರೆ.
ಕ್ಲಿನಿಕ್ ಮುಚ್ಚಿಸಿದ ಆರೋಗ್ಯ ಇಲಾಖೆ ನೋಟೀಸ್ ನೀಡಿದ್ದು, ಪ್ರಕರಣ ದಾಖಲಾಗುವ ಹಂತದಲ್ಲಿದೆ. ಇಂದು ಕಾರವಾರದ ನಗರದ ಕೆಇಬಿ ರಸ್ತೆ ಸಮೀಪ ಇದ್ದ ನಕಲಿ ಕ್ಲಿನಿಕ್ ಮುಚ್ಚಿಸಲಾಗಿದೆ ಎಂದು ಡಿಎಚ್ಒ ಮಾಹಿತಿ ನೀಡಿದರು.
ಪ್ರಸಕ್ತ ವರ್ಷ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಐದು ಕಡೆ ನಕಲಿ ಕ್ಲಿನಿಕ್ ನಡೆಸುತ್ತಿದ್ದವನ್ನು ಮುಚ್ಚಿಸಲಾಗಿದೆ. ಅಲ್ಲದೆ ನಕಲಿ ಸರ್ಟಿಫಿಕೇಟ್ ಅಥವಾ ಮಾನ್ಯತೆ ಇಲ್ಲದ ಸಂಸ್ಥೆಗಳಿಂದ ಪಡೆದ ವೈದ್ಯಕೀಯ ಪ್ರಮಾಣ ಪತ್ರಗಳನ್ನು ವಶಕ್ಕೆ ಪಡೆದು ಪ್ರಶ್ನಿಸಲಾಗಿದೆ. ಕ್ಲಿನಿಕ್ ಮುಚ್ಚಿಸಲಾಗಿದೆ.
ಉ.ಕ.ಜಿಲ್ಲೆಯಲ್ಲಿ 2024-25 ರಲ್ಲಿ 36 ಕಡೆ ನಕಲಿ ಕ್ಲಿನಿಕ್ ಪ್ರಕರಣ ಪತ್ತೆಯಾಗಿವೆ. ಈ ಪೈಕಿ ಗಂಭೀರ ತಪ್ಪು ಮಾಡಿದ ಕ್ಲಿನಿಕ್ಗಳ ಮೇಲೆ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ. 14 ಕ್ಲಿನಿಕ್ಗಳನ್ನು ಮುಚ್ಚಿಸಲಾಗಿದೆ.
ಇವುಗಳಲ್ಲಿ ಜೊಯಿಡಾ, ದಾಂಡೇಲಿ, ಹಳಿಯಾಳ, ಮುಂಡಗೋಡ, ಯಲ್ಲಾಪುರ, ಸಿದ್ದಾಪುರ, ಅಂಕೋಲಾ, ಕುಮಟಾ ತಾಲೂಕುಗಳಲ್ಲಿ ಇದ್ದ ನಕಲಿ ಕ್ಲಿನಿಕ್ಗಳು ಸೇರಿವೆ. 11 ನಕಲಿ ಕ್ಲಿನಿಕ್ಗಳ ಮಾನ್ಯತೆ ಪಡೆಯದ ವೈದ್ಯರಿಗೆ ನೋಟೀಸ್ ನೀಡಲಾಗಿದೆ.
ದಾಖಲೆ ಸರಿಯಿದ್ದ 8 ಕ್ಲಿನಿಕ್ ಸರಿಪಡಿಸಿ, ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಸಹ ನಡೆದಿದೆ.
ನಕಲಿ ಕ್ಲಿನಿಕ್ನವರು ಅನೈತಿಕ ಸಂಬಂಧದ ಅಬಾಶನ್ ಮಾಡಿಸುವ ಕೃತ್ಯದಲ್ಲಿ ಪಾಲುದಾರಿಕೆ ವಹಿಸುವ ಸಾಧ್ಯತೆಗಳಿದ್ದು, ಅಂಥವರ ಮೇಲೆ ಕಣ್ಣಿಡಲಾಗಿದೆ. ಅಲ್ಲದೆ ಬಡವರಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಇವರು ಸುಲಿಗೆ ಮಾಡುವ ಎಲ್ಲಾ ಆಯಾಮಗಳನ್ನು ಪರಿಶೀಲಿಸಲಾಗುತ್ತಿದೆ.
ನಕಲಿ ವೈದ್ಯರ ಮೇಲೆ ಆಶಾ ಕಾರ್ಯಕರ್ತರು ಮತ್ತು ಪೊಲೀಸ್ ಇಲಾಖೆಯ ಮೂಲಕ ಮಾಹಿತಿ ಪಡೆಯುವ ವ್ಯವಸ್ಥೆ ನಮ್ಮಲ್ಲಿದೆ ಎಂದು ಆರೋಗ್ಯ ಇಲಾಖೆ ಹೇಳುತ್ತಿದ್ದು, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಲಪಡಿಸಲು ಎಲ್ಲಾ ಕ್ರಮಗಳಿಗೆ ಮುಂದಾಗಿದೆ.