ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಗೌರಿ, ಗಣೇಶ ಹಬ್ಬವನ್ನು ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಜಿಲ್ಲಾ ಪರಿಸರ ಅಧಿಕಾರಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ರಾಜ್ಯ ಉಚ್ಛ ನ್ಯಾಯಾಲಯದ ಆದೇಶ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಸೂಚನೆಯಂತೆ ನೈಸರ್ಗಿಕ ಜಲಮೂಲಗಳ ರಕ್ಷಣೆಗಾಗಿ ಪಿಓಪಿ ಮತ್ತು ರಾಸಾಯನಿಕ ಮಿಶ್ರಿತ ಬಣ್ಣ ಲೇಪಿತ ಮೂರ್ತಿಗಳನ್ನು ಇನ್ನೂ ಮುಂದೆ ರಾಜ್ಯದ ಕೆರೆ, ಬಾವಿ, ನದಿ ಇತರೆ ಜಲ ಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕರು ಬಣ್ಣ ರಹಿತ ಗಣೇಶ ಮೂರ್ತಿಗಳೊಂದಿಗೆ ಹಬ್ಬ ಆಚರಿಸಿ ಸ್ಥಳೀಯ ಸಂಸ್ಥೆಗಳು ನಿಗಧಿ ಪಡಿಸಿದ ಸ್ಥಳದಲ್ಲಿಯೇ ಮೂರ್ತಿ ವಿಸರ್ಜಿಸಬೇಕು. ಡಿ.ಜೆ. ಬಳಸುವಂತಿಲ್ಲ. ಧ್ವನಿವರ್ಧಕಗಳಿಂದ ಹೊರ ಸೂಸುವ ಶಬ್ದ ಮಾಲಿನ್ಯದಿಂದ ಚಿಕ್ಕ ಮಕ್ಕಳಿಗೆ, ಹಿರಿಯ ನಾಗರಿಕರಿಗೆ, ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗದಂತೆ ಶಬ್ದ ಮಾಲಿನ್ಯವನ್ನು ತಡೆಗಟ್ಟಲು ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆ 2000 ರಲ್ಲಿಯ ಮಾರ್ಗಸೂಚಿಗಳನ್ನು ಪಾಲಿಸಬೇಕು.
ಆಯಾ ವಲಯಗಳಿಗೆ ನಿಗಧಿ ಪಡಿಸಿದ ಪರಿವೆಷ್ಠಕ ಶಬ್ದದ ಗುಣಮಟ್ಟದ ಪ್ರಕಾರ ಧ್ವನಿ ವರ್ಧಕಗಳಿಂದ ಹೊರ ಹೊಮ್ಮುವ ಶಬ್ದ ಇರಬೇಕು. ಧ್ವನಿವರ್ಧಕ ಬಳಸಲು ಸಮಯ ನಿಗಧಿ ಪಡಿಸಿದ್ದು ರಾತ್ರಿ 10 ರಿಂದ ಬೆಳಿಗ್ಗೆ 6ರವರೆಗೆ ಯಾವುದೇ ತರಹದ ಧ್ವನಿ ವರ್ಧಕಗಳ ಬಳಕೆ ನಿಷೇಧಿಸಿದೆ. ಅಲಂಕಾರಕ್ಕಾಗಿ ಬಳಸುವ ಪ್ಲಾಸ್ಟಿಕ್ ವಸ್ತುಗಳನ್ನು, ಥರ್ಮೊಕೋಲ್ ಗಳನ್ನು ಬಳಸದಂತೆ ನಿಷೇಧಿಸಿದೆ. ಊಟ, ಪ್ರಸಾದ ವಿತರಣೆಯಲ್ಲಿ ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೆ ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವಂತೆ ಸೂಚಿಸಿದ್ದಾರೆ.
ಪಟಾಕಿ ಮಾರಾಟ ಮಾಡುವವರು ಕೇವಲ ಹಸಿರು ಪಟಾಕಿಯನ್ನು ಮಾತ್ರ ಮಾರಾಟ ಮಾಡುವಂತೆ ಸೂಚಿಸಿದ್ದು, ಸಾರ್ವಜನಿಕ ಹಿತದೃಷ್ಠಿಯಿಂದ ರಾತ್ರಿ 8 ಗಂಟೆಯಿಂದ 10 ಗಂಟೆ ವರೆಗೆ ಮಾತ್ರ ಹಸಿರು ಪಟಾಕಿಗಳನ್ನು ಸಿಡಿಸಬಹುದು. 10 ಗಂಟೆಯ ನಂತರ ಪಟಾಕಿ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ತಿಳಿಸಿದ್ದು, ಮಾರ್ಗಸೂಚಿಯನ್ವಯ ಜಿಲ್ಲೆಯಲ್ಲಿ ಗಣೇಶ ಹಬ್ಬ ಆಚರಿಸುವಂತೆ ಮನವಿ ಮಾಡಿದ್ದಾರೆ.