Home ನಮ್ಮ ಜಿಲ್ಲೆ ಉತ್ತರ ಕನ್ನಡ ಕಾರವಾರ: ಅಮೃತ ಸರೋವರ ಬೋಟಿಂಗ್, ಹಳ್ಳಿ ಪ್ರವಾಸೋದ್ಯಮದತ್ತ ಹೆಜ್ಜೆ

ಕಾರವಾರ: ಅಮೃತ ಸರೋವರ ಬೋಟಿಂಗ್, ಹಳ್ಳಿ ಪ್ರವಾಸೋದ್ಯಮದತ್ತ ಹೆಜ್ಜೆ

0

ಒಂದೊಮ್ಮೆ ಮೌನವಾಗಿ ನಿಂತಿದ್ದ ಕೆರೆ ಪ್ರಸ್ತುತ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅಮೃತ ಸರೋವರವಾಗಿ ಅಭಿವೃದ್ಧಿಯಾದ ನಂತರ ಇಂದು ಜನಜಂಗುಳಿಯಿಂದ ಕಂಗೊಳಿಸುತ್ತಿದ್ದು, ಇದಕ್ಕೆ ಮುಖ್ಯ ಕಾರಣ ಇಲ್ಲಿ ಬೋಟಿಂಗ್ ಸೇವೆ ಪ್ರಾರಂಭವಾಗಿರುವುದು.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಣಕೊಣ ಗಾಮ ಪಂಚಾಯಿತಿಯ ಹೋಟೆಗಾಳಿ ಗ್ರಾಮದ ವ್ಯಾಪ್ತಿಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಅಮೃತ ಸರೋವರ ಅಭಿವೃದ್ಧಿ ಮಾಡಿ ಅದಕ್ಕೆ ಭೀಮಕೊಲ ಎಂದು ನಾಮಕರಣ ಮಾಡಲಾಗಿದೆ. ಅಲ್ಲಿಯ ಗ್ರಾಮ ಪಂಚಾಯತಿ ಹಾಗೂ ಕೆರೆ ಅಭಿವೃದ್ಧಿ ಸಮಿತಿ ರಚಿಸಿ ಅವರ ಸಹಕಾರದಿಂದ ಸರೋವರದಲ್ಲಿ ಬೋಟಿಂಗ್ ವ್ಯವಸ್ಥೆ ಆರಂಭಿಸಲಾಗಿದೆ. ಪ್ರವಾಸಿಗರು ಈ ಗ್ರಾಮಕ್ಕೆ ಬರುವಂತೆ ಮಾಡಲು ಸರೋವರದ ಸುತ್ತಮುತ್ತ ಸ್ವಚ್ಛತೆ, ಕುಳಿತುಕೊಳ್ಳಲು ಆಸನ, ಸೌಂದರ್ಯವರ್ಧನೆ ಮಾಡಲಾಗಿದೆ.

ಪ್ರಕೃತಿಯ ಮಡಿಲಿನಲ್ಲಿ ಬಹಳ ಚೆನ್ನಾಗಿ ಅಭಿವೃದ್ಧಿಯಾಗಿರುವ ಈ ಸರೋವರವು ಪ್ರವಾಸಿಗರನ್ನು ಸೆಳೆಯುತ್ತಿದೆ ಹಾಗೂ ಅದು ವಿಕೆಂಡ್ ಟೂರಿಸಂ ಸ್ಪಾಟ್ ಆಗಿ ಪರಿವರ್ತನೆ ಹೊಂದಿದೆ. ಕಾರವಾರ ನಗರದಿಂದ ಕೆಲವೇ ಸಮಯದ ದೂರ ಇರುವುದರಿಂದ ಈ ಸರೋವರಕ್ಕೆ ಸಾಕಷ್ಟು ಜನ ಪ್ರವಾಸಿಗರು ಶನಿವಾರ, ಭಾನುವಾರ ಮತ್ತು ರಜಾ ದಿನಗಳಲ್ಲಿ ಬಂದು ಬೋಟಿಂಗ್‌ ಇತ್ಯಾದಿ ಜಲ ಕ್ರೀಡೆ ಚಟುವಟಿಗಳನ್ನು ಮಾಡಿ ಮನರಂಜನೆಗೊಂಡು ಹೋಗುತ್ತಾರೆ. ಬೋಟಿಂಗ್ ಪ್ರಾರಂಭವಾದ ಬಳಿಕ ಹಳ್ಳಿ ಮಾತ್ರವಲ್ಲ, ಹತ್ತಿರದ ಬೇರೆ ಬೇರೆ ಪಟ್ಟಣಗಳಿಂದಲೂ ಜನರು ಭೇಟಿ ನೀಡುತ್ತಿದ್ದಾರೆ. ಕುಟುಂಬದವರ ಜೊತೆ ಬೋಟ್ ಸವಾರಿ ಮಾಡಿ ಆನಂದ ಹಾಗೂ ನೆನಪುಗಳು ಕಲೆಹಾಕುತ್ತಿದ್ದಾರೆ.

ಬೋಟಿಂಗ್ ಟಿಕೆಟ್ ದರದಿಂದ ಗ್ರಾಮ ಪಂಚಾಯತಿಗೆ ಆದಾಯ ಹೆಚ್ಚಾಗಿದೆ ಮತ್ತು ಬೋಟಿಂಗ್ ನಿರ್ವಹಣೆಯಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ಸಿಕ್ಕಿದೆ. ಪ್ರವಾಸಿಗರು ಬರುವುದರಿಂದ ಹಳ್ಳಿಯ ಹೊಟೇಲ್, ಚಹಾ ಅಂಗಡಿ, ಸಣ್ಣ ವ್ಯಾಪಾರಿಗಳಿಗೆ ಹೆಚ್ಚುವರಿ ಆದಾಯ ದೊರೆಯುತ್ತಿದೆ.

ಅಮೃತ ಸರೋವರದಲ್ಲಿ ಬೋಟಿಂಗ್ ಪ್ರಾರಂಭವಾದ ನಂತರ ಹಳ್ಳಿ ಜನರಿಗೆ ಸ್ವಾಭಿಮಾನ, ಒಗ್ಗಟ್ಟು ಮತ್ತು ಸ್ವಾವಲಂಬನೆ ಬೆಳೆಯತೊಡಗಿದೆ ಹಾಗೂ ಯುವಕರು ತಮ್ಮ ಊರಲ್ಲೇ ಅವಕಾಶ ಹುಡುಕುವ ದಾರಿಯನ್ನು ಕಂಡುಕೊಂಡಿದ್ದಾರೆ. ಬೋಟಿಂಗ್ ಯಶಸ್ಸಿನಿಂದ ಗ್ರಾಮಸ್ಥರು ಸರೋವರವನ್ನು ಪರ್ಯಟನಾ ಕೇಂದ್ರವಾಗಿ ರೂಪಿಸಲು ಉತ್ಸಾಹದಿಂದ ಮುಂದಾಗಿದ್ದಾರೆ. ಭವಿಷ್ಯದಲ್ಲಿ ಇನ್ನಷ್ಟು ಬೋಟ್‌ಗಳು, ಮಕ್ಕಳಿಗಾಗಿ ಆಟದ ಸ್ಥಳ ಹಾಗೂ ರಾತ್ರಿ ಬೆಳಕು ಅಳವಡಿಸುವ ಯೋಜನೆಗಳೂ ಕೈಗೆತ್ತಿಕೊಳ್ಳಲಾಗುತ್ತಿದೆ.

ಅಮೃತ ಸರೋವರದಲ್ಲಿ ಬೋಟಿಂಗ್ ಪ್ರಾರಂಭವಾದುದು ಹಳ್ಳಿಯ ಪ್ರವಾಸೋದ್ಯಮಕ್ಕೆ ಮಹತ್ತರ ಹೆಜ್ಜೆ. ಇದರಿಂದ ಸ್ಥಳೀಯ ಯುವಕರಿಗೆ ಉದ್ಯೋಗ ಸಿಕ್ಕಂತೆಯೇ, ಹಳ್ಳಿ ಆರ್ಥಿಕತೆಗೂ ಹೊಸ ಚೈತನ್ಯ ಬಂದಿದೆ. ಈ ಯೋಜನೆ ಇನ್ನಷ್ಟು ಯಶಸ್ವಿಯಾಗಲು ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುವ ಯೋಜನೆಯೂ ಮುಂದಿದೆ ಎಂದು ಕರೀಂ ಅಸದಿ ಯೋಜನಾ ನಿರ್ದೇಶಕರು (ಡಿ.ಆರ್.ಡಿ.ಎ), ಜಿಲ್ಲಾ ಪಂಚಾಯತಿ ಕಾರವಾರ ಹೇಳಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version