Home ನಮ್ಮ ಜಿಲ್ಲೆ ರಾಮನಗರ ಬಿಡದಿ ಟೌನ್‌ಶಿ‌ಪ್: ರೈತರ ಭೂಮಿ ಕಿತ್ತುಕೊಳ್ಳಲು ಬಿಡುವುದಿಲ್ಲ

ಬಿಡದಿ ಟೌನ್‌ಶಿ‌ಪ್: ರೈತರ ಭೂಮಿ ಕಿತ್ತುಕೊಳ್ಳಲು ಬಿಡುವುದಿಲ್ಲ

0

ಬಿಡದಿ ಟೌನ್‌ಶಿಪ್ ದೇವೇಗೌಡರ ಪುತ್ರನ ಕೂಸು ಎಂದು ಸುಳ್ಳು ಪ್ರಚಾರ ನಡೆಸುತ್ತಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೌನ್‌ಶಿಪ್‌ಗಾಗಿ ರೈತರ ಒಂದು ಇಂಚು ಭೂಮಿಯನ್ನು ಕಿತ್ತುಕೊಳ್ಳಲು ಬಿಡುವುದಿಲ್ಲ ಎಂದು ಗುಡುಗಿದರು.

ಟೌನ್ ಶಿಪ್ ವಿರೋಧಿಸಿ ಬಿಡದಿ ಭಾಗದ ರೈತರು ಭಾನುವಾರ ನಡೆಸಿದ ಬೃಹತ್ ಪ್ರತಿಭಟನೆ ಉದ್ದೇಶಿಸಿ ನವದೆಹಲಿಯಿಂದಲೇ ವಿಡಿಯೋ ಕಾನ್ಫರೆನ್ಸ್
ಮೂಲಕ ಮಾಜಿ ಸಿಎಂ, ಕೇಂದ್ರ ಸಚಿವ ಕುಮಾರಸ್ವಾಮಿ ಮಾತನಾಡಿದರು.

“ಬಡವರು, ರೈತರ ಭೂಮಿಯನ್ನು ಲೂಟಿ ಹೊಡೆಯುತ್ತಿರುವ ವ್ಯಕ್ತಿ ನನ್ನ ಬಗ್ಗೆ ಲಘವಾಗಿ ಮಾತನಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ನಾನು ಒಬ್ಬ ರೈತನಾಗಿ ಬಿಡದಿಯಲ್ಲಿ ಜೀವನ ಕಟ್ಟಿಕೊಂಡಿದ್ದೇನೆ. ಆತನಂತೆ ಕೊಳ್ಳೆ ಹೊಡೆದ ಬಡವರ ಭೂಮಿಯಲ್ಲಿ ಶಾಲೆ, ಕಾಲೇಜು, ಮುಗಿಲೆತ್ತರದ ಕಟ್ಟಡಗಳನ್ನು ಸೇರಿ ಕೋಟೆ ಕೊತ್ತಲಗಳನ್ನು ಕಟ್ಟಿಕೊಂಡಿಲ್ಲ” ಎಂದು ಕುಮಾರಸ್ವಾಮಿ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದರು.

ಬಡವರು, ದುರ್ಬಲರ ಭೂಮಿಯನ್ನು ದಬ್ಬಾಳಿಕೆ ಮಾಡಿ ಕಬಳಿಸಿರುವ ಡಿಕೆಶಿ ಜನ್ಮ ಜಾಲಾಡಿದ ಕುಮಾರಸ್ವಾಮಿ ಅವರು, ಕೆಲವು ಉದಾಹರಣೆಗಳು ಮತ್ತು ನೈಜ ಘಟನೆಗಳ ಸಮೇತ ರೈತರ ಗಮನಕ್ಕೆ ತಂದರು.

  • ಬಿಳ್ಳೆಕೆಂಪನಹಳ್ಳಿ ಗ್ರಾಮದ ಕೃಷ್ಣಮೂರ್ತಿ ಎಂಬ ವ್ಯಕ್ತಿ ಕರ್ನಾಟಕ ಹಣಕಾಸು ನಿಗಮದಿಂದ ಸಾಲ ಪಡೆದು ಬೆಂಗಳೂರು-ಮೈಸೂರು ಮುಖ್ಯರಸ್ತೆಯಲ್ಲಿ ಹೋಟೆಲ್ ಮಾಡಿದ್ದರು. ಆ ಜಾಗವನ್ನು ದಬ್ಬಾಳಿಕೆಯಿಂದ ಖಾಲಿ ಮಾಡಿಸಿ, ಪುನಾ ಕಡಿಮೆ ಬೆಲೆಗೆ ಅದೇ ಜಾಗವನ್ನು ಖರೀದಿ ಮಾಡಿಸಿ ಅಲ್ಲೇ ಶಾಲಾ ಕಟ್ಟಡ ಕಟ್ಟಿಕೊಂಡಿದ್ದಾರೆ ಎಂದು ಡಿಸಿಎಂ ಡಿಕೆಶಿ ವಿರುದ್ಧ ಕೇಂದ್ರ ಸಚಿವರು ಗಂಭೀರ ಆರೋಪ ಮಾಡಿದರು.

    * ಇನ್ನೊಬ್ಬರು ರಾಮಸ್ವಾಮಿ ಅಂತ ಇದ್ದರು. ಅವರು ಭಾರತೀಯ ಸೇನೆಯಲ್ಲಿ ರಾಷ್ಟ್ರಸೇವೆ ಮಾಡಿ ಬಂದಿದ್ದರು. ಅವರು ತಮ್ಮ ಕಷ್ಟದ ಹಣದಿಂದ ಒಂದಿಷ್ಟು ಜಮೀನು ಖರೀದಿಸಿ ಬದುಕು ಕಟ್ಟಿಕೊಂಡಿದ್ದರು. ಆ ಭೂಮಿಯ ಮೇಲೆ ಡಿಕೆಶಿ ಕಾಕದೃಷ್ಟಿ ಬಿದ್ದಿತು. ಆ ಜಮೀನು ಬಿಟ್ಟುಕೊಡಿ ಎಂದು ಅವರಿಗೆ ಧಮ್ಕಿ ಹಾಕಿದ್ದರು. ಅವರು ಬಿಟ್ಟು ಕೊಡಲಿಲ್ಲ. ಕೊನೆಗೆ ಆ ಸೈನಿಕನ ಮಗಳನ್ನೇ ಕಿಡ್ನಾಪ್ ಮಾಡಿ ಆ ಜಮೀನನ್ನು ಬರೆಸಿಕೊಂಡಿದ್ದಾರೆ. ಇಂತಹ ನೀಚ ಕೆಲಸ ನಾವು ಮಾಡಿದ್ದೇವೆಯೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

“ಬೆಂಗಳೂರು ಸುತ್ತಮುತ್ತ ನೈಸ್ ರಸ್ತೆ ಇದೆ. ಹೊಸಕೆರೆಹಳ್ಳಿ ಸುತ್ತಮುತ್ತ ಸಾರ್ವಜನಿಕರಿಂದ ಸ್ವಾಧೀನ ಮಾಡಿಕೊಂಡಿರುವ ಭೂಮಿಯನ್ನೂ ಡಿಕೆಶಿ ಕಬಳಿಸಿದ್ದಾರೆ. ಜತೆಗೆ, ಹಿಂದೆ ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಇದೇ ಶಿವಕುಮಾರ್ ಸಚಿವರಾಗಿದ್ದರು. ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ರಸ್ತೆ ಮಾಡುತ್ತೇವೆ ಭಾರೀ ಪ್ರಮಾಣದಲ್ಲಿ ಭೂಮಿಯನ್ನು ಸ್ವಾಧೀನ ಮಾಡಿಕೊಂಡರು. ಅದಕ್ಕೊಂದು ಪ್ರಾಧಿಕಾರ ಮಾಡಿ ಅದಕ್ಕೆ ಇವರೇ ಅಧ್ಯಕ್ಷರಾದರು. ಇಪ್ಪತ್ತು ವರ್ಷದ ಮೇಲೆ ಆಯಿತು. ರಸ್ತೆ ನಿರ್ಮಾಣ ಮಾಡಿದರಾ? ಇಲ್ಲ. ಆ ಭೂಮಿಯನ್ನು ನುಂಗಲು ಹೊರಟಿದ್ದಾರೆ. ಆದರೆ ಕೇವಲ ಎರಡು ಮೂರು ವರ್ಷದಲ್ಲಿ ಬೆಂಗಳೂರು-ಮೈಸೂರು ನೂತನ ಹೆದ್ದಾರಿ ನಿರ್ಮಾಣವಾಯಿತು. ನಾನು ಸಿಎಂ ಆಗಿದ್ದಾಗ ಅತ್ಯಂತ ಕ್ಷಿಪ್ರಗತಿಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಲಾಯಿತು” ಎಂದು ಕುಮಾರಸ್ವಾಮಿ ಹೇಳಿದರು.

“ಬಡವರ ಭೂಮಿಗೆ ಕನ್ನ ಹಾಕುವ ಇಂಥ ವ್ಯಕ್ತಿಗಳು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಇವರಿಗೆ ಹೋರಾಟದ ಮೂಲಕವೇ ಉತ್ತರ ಕೊಡುತ್ತೇವೆ. ಯಾರೂ ಹೆದರಬೇಕಿಲ್ಲ. ಟೌನ್ ಶಿಪ್ ಹೆಸರಿನಲ್ಲಿ ಆ ಭಾಗದ ಫಲವತ್ತಾದ ಭೂಮಿಯನ್ನು ಲೂಟಿ ಮಾಡಲು ಹೊರಟಿದ್ದಾರೆ. ಅದಕ್ಕೆ ಅವಕಾಶ ನೀಡುವುದಿಲ್ಲ. ಒಂದು ಇಂಚು ಜಮೀನನ್ನು ಬಿಟ್ಟುಕೊಡುವುದಿಲ್ಲ” ಎಂದು ರೈತರಿಗೆ ಧೈರ್ಯ ತುಂಬಿದರು.

“ಭೂಮಿಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ನಾನೂ ನಿಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತೇನೆ. ಖುದ್ದಾಗಿ ನಾನೇ ಬಂದು ಹೋರಾಟದಲ್ಲಿ ಭಾಗವಹಿಸುತ್ತೇನೆ. ರೈತರಿಗಾಗಿ ನನ್ನ ಆರೋಗ್ಯದ ಹಂಗು ತೊರೆದು ಹೋರಾಡುತ್ತೇನೆ. ಯಾರು ಬಂದು ಸ್ವಾಧೀನ ಮಾಡಿಕೊಳ್ಳುತ್ತಾರೋ ನೋಡೋಣ?” ಎಂದು ಕುಮಾರಸ್ವಾಮಿ ರಾಜ್ಯ ಸರಕಾರಕ್ಕೆ ಸವಾಲು ಹಾಕಿದರು.

“ಈ ದೇಶದಲ್ಲಿ ರೈತರ ಪರವಾಗಿ ಧ್ವನಿ ಎತ್ತಿದ ರಾಜಕಾರಣಿ ಎಂದರೇ ಅದು ದೇವೇಗೌಡರು. ನಾನು ಎಂದೂ ಹೀಗೆ ಭೂಮಿಯನ್ನು ಕಿತ್ತುಕೊಂಡು ಅಭಿವೃದ್ಧಿ ಮಾಡುತ್ತೇನೆ ಎಂದು ಸುಳ್ಳು ಹೇಳಲಿಲ್ಲ. ನಾನು ಅಂದು ಯೋಜನೆಗಾಗಿ ಭೂಮಿ ಸ್ವಾಧೀನ ಮಾಡಿಕೊಂಡಿರಲಿಲ್ಲ. 40% ಭೂಮಿಯನ್ನು ರೈತರಿಗೇ ಉಳಿಸಿಕೊಳ್ಳಲು ಅವಕಾಶ ನೀಡದ್ದೆ. ನನ್ನ ಜೀವನದ ಕೊನೆಯವರೆಗೂ ರೈತರಿಗೆ ಅನ್ಯಾಯ ಮಾಡಲ್ಲ” ಎಂದರು.

“ಬಿಡದಿ ಟೌನ್ ಶಿಪ್ ನೆಪದಲ್ಲಿ ಜನರಿಗೆ ಸುಳ್ಳು ಅಂಕಿಅಂಶ ಹೇಳುತ್ತಿದ್ದಾರೆ. ಡಿಕೆಶಿ ಜತೆ ಅಧಿಕಾರಿಗಳು ಕುಮ್ಮಕ್ಕಾಗಿ ಭೂಮಿಯನ್ನು ಲೂಟಿ ಮಾಡಲು ಹೊರಟಿದ್ದಾರೆ. 9,000 ಎಕರೆಯಲ್ಲಿ 3,000-4,000 ಎಕರೆಯಷ್ಟು ಸರಕಾರಿ ಭೂಮಿ ಇದೆ ಎಂದು ಸುಳ್ಳು ಹೇಳಿದ್ದರು. ಆದರೆ ಅಸಲಿಗೆ ಅಲ್ಲಿರುವ ಸರಕಾರಿ ಭೂಮಿ 700 ಎಕರೆ ಮಾತ್ರ ಎಂದು ತೋರಿಸುತ್ತಿದ್ದಾರೆ. ಟೌನ್ ಶಿಪ್ ಹೆಸರಲ್ಲಿ ಭೂಮಿ ಲೂಟಿ ಹೊಡೆಯಲು ಹೊರಟಿದ್ದಾರೆ” ಎಂದು ಆರೋಪಿಸಿದರು.

“ಭೂಮಿ ಕೊಡಲು ನಿರಾಕರಿಸುತ್ತಿರುವ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಅಧಿಕಾರಿಗಳು, ಅದರಲ್ಲಿಯೂ ಪೆÇಲೀಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು; ನೀವು ತಪ್ಪು ಮಾಡುತ್ತಿದ್ದೀರಿ. ಮುಂದೆ ಅದರ ಫಲ ಅನುಭವಿಸಬೇಕಾಗುತ್ತದೆ. ನೀವು ಮಾಡಿರುವ ತಪ್ಪಿಗೆ ಜೈಲಿಗೂ ಹೋಗಬೇಕಾಗುತ್ತದೆ. ಈ ಸರಕಾರ ಇನ್ನು ಎರಡು ವರ್ಷ ಇರುತ್ತದೆ. ಆಮೇಲೆ ಏನಾಗುತ್ತದೆ? ಎನ್ನುವುದು ನನಗೆ ಗೊತ್ತಿದೆ. ಯಾರೋ ಹೇಳುತ್ತಾರೆ ಎಂದು ಸುಖಾಸುಮ್ಮನೆ ರೈತರ ತಂಟೆಗೆ ಹೋಗಬೇಡಿ” ಎಂದು ಎಚ್ಚರಿಕೆ ನೀಡಿದರು.

“ರೈತರ ಮೇಲೆ ಅಧಿಕಾರಿಗಳು ದಬ್ಬಾಳಿಕೆ ಮಾಡುವುದನ್ನು ನಿಲ್ಲಿಸಬೇಕು. ನಾನು ಕಾಣದ ಅಧಿಕಾರಿಗಳ ನೀವು?. ನಿಮ್ಮ ನಡವಳಿಕೆಗಳು ನನಗೆ ಗೊತ್ತಿದೆ. ರೈತರಿಗೆ, ಸ್ಥಳಿಯರಿಗೆ ರಕ್ಷಣೆ ನೀಡುವಲ್ಲಿ ಸಣ್ಣ ಲೋಪವಾದರೂ ನಾನೇ ಅಲ್ಲಿಗೆ ಬರುತ್ತೇನೆ” ಎಂದು ಪೊಲೀಸ್ ಅಧಿಕಾರಿಗಳಿಗೆ ಅವರು ಎಚ್ಚರಿಕೆ ನೀಡಿದರು .

“ಒಂದು ವೇಳೆ ಅಧಿಕಾರ ದರ್ಪದಿಂದ ನೀವೇನಾದರೂ ರೈತರಿಗೆ ತೊಂದರೆ ಕೊಟ್ಟರೇ ನಾನೇ ಖುದ್ದು ಬರುತ್ತೇನೆ. ನಿಮಗೆ ಮತ್ತೆ ಮತ್ತೆ ಎಚ್ಚರಿಕೆ ನೀಡುತ್ತೇನೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಜೆಡಿಎಸ್ ಮುಗಿದು ಹೋಗುತ್ತದೆ ಎಂದು ನೀವು ಭಾವಿಸಿದ್ದರೆ ಅದು ಮೂರ್ಖತನ” ಎಂದು ಕುಮಾರಸ್ವಾಮಿ ಕಟುವಾಗಿ ಹೇಳಿದರು.

NO COMMENTS

LEAVE A REPLY

Please enter your comment!
Please enter your name here

Exit mobile version