ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಬಳಿಕ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಈಗ ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ಆದರೆ ಈಗ ಬಿಎಂಆರ್ಸಿಎಲ್ ಪ್ರಯಾಣಿಕರು ತೆಗೆದುಕೊಂಡು ಹೋಗುವ ಲಗೇಜ್ ಶುಲ್ಕವನ್ನು ಹಾಕಲು ಮುಂದಾಗಿದ್ದಾರೆ.
ಪ್ರಯಾಣ ದರ ಹೆಚ್ಚಳ ಮಾಡಿದ ಬಳಿಕ ಬಹುತೇಕ ಪಯಾಣಿಕರು ಮೆಟ್ರೋದಿಂದ ದೂರ ಇರಲು ತೀರ್ಮಾನಿಸಿದರು. ಆದರೆ ಇದೀಗ ಹಳದಿ ಮಾರ್ಗ ಆರಂಭವಾದ ಬಳಿಕ ಹೆಚ್ಚಿನ ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ.
ಈ ವೇಳೆಯಲ್ಲಿಯೇ ಬಿಎಂಆರ್ಸಿಎಲ್ ಅಧಿಕಾರಿಗಳು ಪ್ರಯಾಣಿಕರು ತೆಗೆದುಕೊಂಡು ಹೋಗುವ ಲಗೇಜ್ಗೂ ಶುಲ್ಕ ವಿಧಿಸುಲು ಮುಂದಾಗಿದ್ದಾರೆ. ಹೌದು ಇನ್ನು ಮುಂದೆ ಮೆಟ್ರೋ ರೈಲಿನಲ್ಲಿ ಸಂಚರಿಸುವ ಜನರು ತಾವು ತೆಗೆದುಕೊಂಡು ಹೋಗುವ ಲಗೇಜ್ಗಳಿಗೂ ಟಿಕೆಟ್ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ.
ಎಷ್ಟು ಶುಲ್ಕ?: ದೇಶದಲ್ಲೇ ಬೆಂಗಳೂರು ಮೆಟ್ರೋ ಅತ್ಯಂತ ದುಬಾರಿ ಎನ್ನುವ ಮಾತುಗಳು ಕೇಳಿಬರುತ್ತಿರುವ ಸಮಯದಲ್ಲೇ ಲಗೇಜ್ ಶುಲ್ಕ ವಿಧಿಸಿರುವ ಈ ಕ್ರಮ ಜನಾಕ್ರೋಶಕ್ಕೆ ಕಾರಣವಾಗಿದೆ.
“ನಮ್ಮ ಮೆಟ್ರೋ ರೈಲಿನಲ್ಲಿ ಬ್ಯಾಗ್ ಕೊಂಡೊಯ್ಯಲು 30ರೂ. ಶುಲ್ಕ ಪಾವತಿಸಬೇಕು ಎಂದು ಕೇಳಿದೆ. ನಮ್ಮ ಮೆಟ್ರೋ ಈಗಾಗಲೇ ದೇಶದಲ್ಲೇ ಅತ್ಯಂತ ದುಬಾರಿಯಾಗಿದೆ. ಬ್ಯಾಗ್ಗೆ ಶುಲ್ಕ ಪಾವತಿ ಮಾಡುವುದು ಪ್ರಯಾಣಿಕರ ಮೇಲೆ ಮತ್ತಷ್ಟು ಹೊರೆಯಾಗುತ್ತದೆ. ಜನರು ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವುದನ್ನು ಬಿಎಂಆರ್ಸಿಎಲ್ ಹೇಗೆ ತಡೆಯುತ್ತಿದೆ ಎಂಬುವುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ” ಎಂದು ಪ್ರಯಾಣಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೆಟ್ರೋ ರೈಲಿನಲ್ಲಿ ಲಗೇಜ್ ಕೊಂಡೊಯ್ಯಲು 30 ರೂ.ಶುಲ್ಕ ಪಾವತಿ ಮಾಡಬೇಕು. ಈ ಕುರಿತು ಪ್ರಯಾಣಿಕ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದಾರೆ. ನಮ್ಮ ಮೆಟ್ರೋದಲ್ಲಿ 15 ಕೆಜಿ ಒಳಗಿನ ಬ್ಯಾಗ್ ಅನ್ನು ಉಚಿತವಾಗಿ ಕೊಂಡೊಯ್ಯಲು ಅವಕಾಶವಿದೆ. ಒಂದು ವೇಳೆ ಪ್ರಯಾಣಿಕರು ಹೆಚ್ಚುವರಿ ಬ್ಯಾಗ್ ಅಥವಾ ದೊಡ್ಡ ಗಾತ್ರದ ಬ್ಯಾಗ್ ಕೊಂಡೊಯ್ಯಲು ಪ್ರತಿ ಬ್ಯಾಗ್ಗೆ 30 ರೂ. ಶುಲ್ಕ ಪಾವತಿಸಿ ಟಿಕೆಟ್ ಅನ್ನು ಗ್ರಾಹಕ ಸೇವಾ ಕೇಂದ್ರದಲ್ಲಿ ಖರೀದಿಸಬೇಕು ಎಂದು ಹೇಳಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ 15 ಕೆಜಿ ಒಳಗಿನ ಬ್ಯಾಗ್ ಉಚಿತ. ಒಂದು ವೇಳೆ ಪ್ರಯಾಣಿಕರು ಹೆಚ್ಚುವರಿ ಬ್ಯಾಗ್ ಅಥವ ದೊಡ್ಡ ಗಾತ್ರದ ಬ್ಯಾಗ್ ಕೊಂಡೊಯ್ಯಲು ಪ್ರತಿ ಬ್ಯಾಗ್ಗೆ 30 ರೂ. ಶುಲ್ಕ ಪಾವತಿಸಿ ಟಿಕೆಟ್ ಅನ್ನು ಖರೀಸಬೇಕು. ಹೆಚ್ಚುವರಿ ಬ್ಯಾಗ್ಗೆ ಟಿಕೆಟ್ ಖರೀದಿಸದಿದ್ದರೆ 250ರೂ. ದಂಡ ವಿಧಿಸಲಾಗುತ್ತದೆ.
10 ಲಕ್ಷ ಪ್ರಯಾಣಿಕರು: ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ 10 ಲಕ್ಷಕ್ಕೆ ಏರಿಕೆಯಾಗಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪೋಸ್ಟ್ ಹಾಕಿದ್ದಾರೆ. ಹಳದಿ ಮಾರ್ಗ ಜನಸಂಚಾರಕ್ಕೆ ಲಭ್ಯವಾದ ನಂತರ ಒಂದೇ ದಿನ ನಮ್ಮ ಮೆಟ್ರೋದಲ್ಲಿ 10.48 ಲಕ್ಷ ಜನ ಪ್ರಯಾಣಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ನೇರಳೆ ಮಾರ್ಗದಲ್ಲಿ 4,51,816, ಹಸಿರು ಮಾರ್ಗದಲ್ಲಿ 2,91,677, ಹಳದಿ ಮಾರ್ಗದಲ್ಲಿ 52,215 ಹಾಗೂ ಇಂಟರ್ಚೇಂಜ್ನಲ್ಲಿ 2,52,323 ಜನರು ಪ್ರಯಾಣ ಬೆಳೆಸಿದ್ದು, ಈಗ ನಮ್ಮ ಮೆಟ್ರೋ ಬೆಂಗಳೂರಿಗರ ಸಂಚಾರ ಜೀವನಾಡಿಯಾಗಿ ಬದಲಾಗಿದೆ ಎಂದು ಹೇಳಿದ್ದರು.
ಬೆಂಗಳೂರು ನಗರ ದೇಶದ ಐಟಿ, ಬಿಟಿ, ತಂತ್ರಜ್ಞಾನದ ತವರು. ಎಲೆಕ್ಟ್ರಾನಿಕ್ ಸಿಟಿ, ಸಿಲ್ಕ್ ಬೋರ್ಡ್, ಸಿಂಗಸಂದ್ರ, ಗೋವಿಂದಶೆಟ್ಟಿ ಪಾಳ್ಯ, ಕೋನಪ್ಪನ ಅಗ್ರಹಾರ ಮುಂತಾದ ಕಡೆಗಳಿಗೆ ಉದ್ಯೋಗ ನಿಮಿತ್ತ ನಿತ್ಯ ಸಂಚರಿಸುವ ಸಾಫ್ಟ್ವೇರ್ ಉದ್ಯೋಗಿಗಳಿಗೆ ಹಳದಿ ಮಾರ್ಗವು ಪ್ರಯಾಣದ ಅವಧಿ ತಗ್ಗಿಸಿ, ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಸಾರ್ವಜನಿಕರು ಹೆಚ್ಚೆಚ್ಚು ಮೆಟ್ರೋದಂತಹ ಸಮೂಹ ಸಾರಿಗೆಯನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸಂಚಾರ ದಟ್ಟಣೆ ನಿವಾರಿಸುವ ನಮ್ಮ ಪ್ರಯತ್ನಕ್ಕೆ ಬೆಂಬಲವಾಗಿ ನಿಲ್ಲಬೇಕೆಂದು ಕೋರುತ್ತೇನೆ ಎಂದು ಮನವಿ ಮಾಡಿದ್ದರು.