ಯಾದಗಿರಿ: ಇಲ್ಲಿನ ಸಮಾಜ ಕಲ್ಯಾಣ ಇಲಾಖೆ ದ್ವೀತಿಯ ದರ್ಜೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಅಂಜಲಿ ಗಿರೀಶ ಕಾಂಬಾನೂರ ಅವರನ್ನು ಹಾಡಹಗಲೇ ಭೀಕರ ಹತ್ಯೆಗೆ ಯತ್ನಿಸಿದ ಘಟನೆ ನಗರದ ಚಿತ್ತಾಪುರ ರಸ್ತೆಯಲ್ಲಿ ಬುಧವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ನಡೆದಿದೆ.
ಹರಿತವಾದ ಆಯುಧಗಳಿಂದ ಕೊಚ್ಚಿ ಕೊಲೆ ಮಾಡಲು ಯತ್ನಿಸಿದಾಗ ಮುಖ ಸೇರಿದಂತೆ ಬೇರೆ, ಬೇರೆ ಕಡೆ ಗಂಭೀರ ಗಾಯಗಳಾಗಿವೆ. ಸಾವು, ಬದುಕಿನ ನಡುವೆ ಹೋರಾಡುತ್ತಿರುವ ಅಂಜಲಿ ಅವರನ್ನು ಕೂಡಲೇ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆ ಸೇರಿಸಲಾಯಿತು. ಅವರು ಈ ಹಿಂದೆ ಶಹಾಬಾದ ನಗರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿದ್ದರು.
ದಲಿತ ದೌರ್ಜನ್ಯ ಕಾಯ್ದೆಯಡಿ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಸಿಕ್ಕ ಹಿನ್ನಲೆಯಲ್ಲಿ ಯಾದಗಿರಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಂಜಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆಯೇ ಇಂದು ಕೆಲಸಕ್ಕೆ ಹಾಜರಾಗಲು ಕಾರಿನಲ್ಲಿ ಬರುತ್ತಿದ್ದ ಅಂಜಲಿ ಅವರನ್ನು ಹಿಮ್ಮೆಟ್ಟಿಸಿಕೊಂಡು ಬಂದ ದಾಳಿಕೋರರು ಗ್ರಿನ್ ಸಿಟಿ ಸಮೀಪದ ರಸ್ತೆಯಲ್ಲಿ ದಾಳಿ ಮಾಡಿ ಎಲ್ಲೆಂದರಲ್ಲಿ ಕೊಚ್ಚಿ ಹತ್ಯೆಗೆ ಯತ್ನಿಸಿದ್ದಾರೆ.
ಘಟನೆ ನಡೆದ ತಕ್ಷಣವೇ ಕಾರು ಚಾಲಕ ಅಜೀಮಿರ್ ದಾಳಿ ಲೆಕ್ಕಿಸದೇ ಗಾಯಾಳು ಅಂಜಲಿ ಅವರನ್ನು ಯಿಮ್ಸ್ ಆಸ್ಪತ್ರೆಗೆ ಸೇರಿಸಿದಾಗ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕರೆದುಕೊಂಡು ಹೋಗಲಾಗಿದೆ.
ಸದ್ಯ ಅಂಜಲಿ ಸ್ಥಿತಿ ಗಂಭಿರವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಹಳೆ ದ್ವೇಷವೇ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಕಳೆದ ಕೆಲ ವರ್ಷಗಳ ಹಿಂದೆ ಈಕೆಯ ಗಂಡ ಗಿರೀಶ ಎಂಬುವವರನ್ನು ಶಹಾಬಾದ ನಗರದ ನಡು ರಸ್ತೆಯಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು.ಆಗ ಅಂಜಲಿ ನಗರಸಭೆ ಅಧ್ಯಕ್ಷರಾಗಿದ್ದರು.


























