ಹುಬ್ಬಳ್ಳಿ : ಕಾಂಗ್ರೆಸ್ ,ಆರ್ ಜೆಡಿ ಪಕ್ಷಗಳ ಮೈತ್ರಿಕೂಟವನ್ನು ಬಿಹಾರಿಗಳು ಧಿಕ್ಕರಿಸಿದ್ದಾರೆ. ಜಂಗಲ್ ರಾಜ ವ್ಯವಸ್ಥೆಯನ್ನು ಬಿಹಾರಿಗಳು ಮರೆತಿಲ್ಲ ಎಂಬುದು ಈ ಚುನಾವಣೆ ಫಲಿತಾಂಶದಲ್ಲಿ ಸ್ಪಷ್ಟವಾಗಿದ್ದು, ಮಂಗಲ್ ರಾಜ್ ಗೆ ಅಲ್ಲಿನ ಜನರು ಬೆಂಬಲಿಸಿ ಆಶೀರ್ವಾದಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ವ್ಯವಸ್ಥೆ, ಚುನಾವಣೆ ವ್ಯವಸ್ಥೆ ಬಗ್ಗೆ ಅಪನಂಬಿಕೆ ಹೊಂದಿದ ರಾಹುಲ್ ಗಾಂಧಿ ಹೇಳಿಕೆ, ಚಿಂತನೆಯನ್ನು ಬಿಹಾರಿಗಳು ಧಿಕ್ಕರಿಸಿದ್ದಾರೆ. ರಾಹುಲ್ ಗಾಂಧಿ ಅವರದು ಸೋಲಿನ ಶತಕ. ಇದಕ್ಕಾಗಿ ನಾವು ಅವರನ್ನು ಅಭಿನಂದಿಸುತ್ತೇನೆ ಎಂದರು.
ರಾಹುಲ್ ಗಾಂಧಿ ಅವರನ್ನು ನಂಬಿ ಯಾವ್ಯಾವ ರಾಜ್ಯದಲ್ಲಿ ಮೈತ್ರಿಮಾಡಿಕೊಂಡ ಪ್ರಾದೇಶಿಕ ಪಕ್ಷಗಳು ಮುಳುಗಿ ಹೋಗಿವೆ. ಈಗ ಬಿಹಾರದಲ್ಲೂ ಮುಳುಗುತ್ತಿವೆ. ಹೀಗಾಗಿ ರಾಹುಲ್ ಗಾಂಧಿ ತಾವು ಮುಳುಗುವುದಲ್ಲದೇ ಬೇರೆಯವರನ್ನು ಮುಳುಗಿಸಿದ್ದಾರೆ ಎಂದು ಹೇಳಿದರು.
ಜೇಲ್ ಮತ್ತು ಬೇಲ್ ಮೇಲಿದ್ದವರನ್ನು ಬಿಹಾರ ರಾಜ್ಯದ ಜನರು ದೂರ ಇಟ್ಟಿದ್ದಾರೆ. ರಾಹುಲ್ ಗಾಂಧಿ ಅವರು ತಮ್ಮ ಮೇಲೆ ತಾವು ಹೈಡ್ರೋಜನ್ ಬಾಂಬ್ ಹಾಕಿಕೊಳ್ಳುವುದಲ್ಲದೇ ಬೇರೆಯವರ ಮೇಲೂ ಹಾಕುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.
ವೋಟ್ ಚೋರಿ ಬಗ್ಗೆ ಚುನಾವಣಾ ಆಯೋಗದ ಬಗ್ಗೆ ಅಪನಂಬಿಕೆ ಹೊಂದಿರುವ ರಾಹುಲ್ ಗಾಂಧಿಯವರು ಆಯೋಗ ಕೇಳಿದ ದಾಖಲೆ ,ಅಫಿಡೇವಿಟ್ ಸಲ್ಲಿಸಿಲ್ಲ ಎಂದು ಪ್ರಶ್ನಿಸಿದರು. ಈ ಎಲ್ಲ ಹಿನ್ನೆಲೆಯನ್ನು ಗಮನಿಸಿ ಬಿಹಾರದ ಜನರು ಅವರನ್ನು ಧಿಕ್ಕರಿಸಿದ್ದಾರೆ. ಎನ್ ಡಿಎ ಪರ ಒಲವು ತೋರಿದ್ದಾರೆ ಎಂದು ಹೇಳಿದರು.


























